ಕುಂದಾಪುರ: ಇತ್ತೀಚೆಗೆ ಪ್ರಕಟಗೊಂಡ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-2026) ಫಲಿತಾಂಶದಲ್ಲಿ ಕುಂದಾಪುರದ ಸುಜ್ಞಾನ ಪಿಯು ಕಾಲೇಜು ತನ್ನ ಪ್ರಥಮ ಬ್ಯಾಚ್ನಲ್ಲೇ ಗಮನಾರ್ಹ ಸಾಧನೆ ಮಾಡಿದ್ದು, ಕುಂದಾಪುರ, ಬೈಂದೂರು, ಬ್ರಹ್ಮಾವರ ಹಾಗೂ ಹೆಬ್ರಿ ತಾಲೂಕುಗಳ ಪಿಯು ಕಾಲೇಜುಗಳ ಪೈಕಿ ಅತ್ಯುತ್ತಮ ಫಲಿತಾಂಶ ದಾಖಲಿಸಿ ಅಗ್ರಸ್ಥಾನ ಪಡೆದಿದೆ.
ಕೇವಲ ಎಂಟು ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡ ಈ ಶಿಕ್ಷಣ ಸಂಸ್ಥೆ ಮೊದಲ ಪ್ರಯತ್ನದಲ್ಲೇ ಅಭೂತಪೂರ್ವ ಯಶಸ್ಸು ಸಾಧಿಸಿರುವುದು ವಿಶೇಷ. ಕಾಲೇಜಿನ ವಿದ್ಯಾರ್ಥಿ ಸಮ್ಮೇದ ಪಾರೀಸ ಬೋಜ ಅವರು 720 ಅಂಕಗಳಿಗೆ 579 ಅಂಕ ಗಳಿಸಿ ಆಲ್ ಇಂಡಿಯಾ ರ್ಯಾಂಕ್ 2135* ಪಡೆದು ಕಾಲೇಜಿನ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದಿದ್ದಾರೆ.
ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಸಮ್ಮೇದ ಪಾರೀಸ ಬೋಜ ಅವರು ಎಸ್ಎಸ್ಎಲ್ಸಿ ವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪಡೆದಿದ್ದು, ತಮ್ಮ ಸಾಧನೆಯ ಮೂಲಕ ಭಾಷೆ ಅಥವಾ ಗ್ರಾಮೀಣ ಹಿನ್ನೆಲೆ ಯಶಸ್ಸಿಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರ ಸಾಧನೆ ಅನೇಕ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿದೆ.
ಈ ಬಾರಿ ಒಟ್ಟು 22 ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದು, ಅವರಲ್ಲಿ 17 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅರ್ಹತೆ (Qualify) ಪಡೆದಿದ್ದಾರೆ. ಅದರಲ್ಲಿ ಐದು ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ಎಂ.ಬಿ.ಬಿ.ಎಸ್. ಸೀಟು ಪಡೆಯುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.
ಪ್ರಮುಖ ಸಾಧಕರು:
- ಸಮ್ಮೇದ ಪಾರೀಸ ಬೋಜ – 579/720 (AIR 2135*)
- ಇಂಚರಾ ಎಸ್. ಪೂಜಾರಿ (NEET ಅಕಾಡೆಮಿ) – 537/720 (AIR 23941*)
- ಧನುಷ್ ದೇವಾಡಿಗ (NLT) – 513/720 (AIR 36395*)
- ಸುಶ್ಮಿತಾ ಪ್ರವೀಣ್ ಕುಮಾರ್ ಸುಕಾಲಿ – 451/720 (ALL INDIA RANK 20144*)
- ಜಯರಾಜ್ ಜೆ.ಎಸ್. – 431/720 (ALL INDIA RANK 14955*)
ಇದಲ್ಲದೆ ಕಾಲೇಜಿನ ವಿದ್ಯಾರ್ಥಿಗಳಾದ ರಮ್ಯಶ್ರೀ ಸಿದ್ದಪ್ಪ ಅಣಜಿ, ಲಕ್ಷ್ಮಿ ಅವಣ್ಣ ವಡೇರ್, ರಿತೇಶ್ ಎಂ.ಎಸ್., ಕೌಶಿಕ್ ಶೆಟ್ಟಿ, ಸೋಹಮ್ ಮಹಾದೇವ ಯಲಿಗಾರ, ಶೀತಲ್ ಕುಮಾರ್ ಶೆಟ್ಟಿ, ಸೃಷ್ಠಿ ಶಿವಾಜಿ ನಲವಾಡೆ, ವಿನಯ್ ಗಡ್ಡಿ, ಸೋಮನ್ ಗೌಡ, ಪೃಥ್ವಿ ನಾಗಪ್ಪ ರಾಮಣ್ಣವರ್, ಭರತ್ ಕುಮಾರ್ ನಾಯ್ಕ್, ವಿನಯ್ ಸುಕುಮಾರ್ ದಿಬ್ಬದ್, ರಕ್ಷಿತ ರಂಗಪ್ಪ ದಾಸರ್, ದರ್ಶನ್ ಪವಾರ್, ಪ್ರದೀಪ್ ಬಸವಣ್ಣೆಪ್ಪ ಚಲ್ಕೊಪ್ಪ, ತನು ಎಸ್. ಹಾಗೂ ಅಲಿಝಾ ಕರಮತ್ತುಲ್ಲಾ ಅವರು ವಿವಿಧ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ಪಡೆಯುವ ಅರ್ಹತೆ ಗಳಿಸಿದ್ದಾರೆ.
ಪ್ರಥಮ ವರ್ಷದಲ್ಲೇ ಈ ಅಪ್ರತಿಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಕಾಲೇಜಿನ ಪ್ರಾಂಶುಪಾಲ ರಂಜನ್ ಬಿ. ಶೆಟ್ಟಿ ಅಭಿನಂದಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಸಮರ್ಪಕ ತರಬೇತಿ, ನಿರಂತರ ಮಾರ್ಗದರ್ಶನ ಮತ್ತು ಗುಣಮಟ್ಟದ ಶಿಕ್ಷಣ ನೀಡಿದ ಉಪನ್ಯಾಸಕ ವೃಂದದ ಶ್ರಮವೇ ಈ ಯಶಸ್ಸಿನ ಹಿಂದಿನ ಪ್ರಮುಖ ಕಾರಣವಾಗಿದ್ದು, ಕಾಲೇಜಿನ ಆಡಳಿತ ಮಂಡಳಿ ಉಪನ್ಯಾಸಕರನ್ನು ವಿಶೇಷವಾಗಿ ಅಭಿನಂದಿಸಿದೆ.


