ಬೆಂಗಳೂರು: ಪ್ರತಿಷ್ಠಿತ ಬೆಂಗಳೂರು ಬಂಟರ ಸಂಘದ 2026-29ನೇ ಸಾಲಿನ ಅವಧಿಯ ಚುನಾವಣಾ ಕಣ ರಂಗೇರಿದ್ದು, ಸಂಘದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಉಡುಪಿಯ ಪ್ರಸಿದ್ಧ ಶ್ರೀ ಕ್ಷೇತ್ರ ಮಂದಾರ್ತಿ ಮೂಲದ ಪ್ರಮುಖ ಸಮಾಜ ಸೇವಕ ಅಮರನಾಥ ಶೆಟ್ಟಿ ಹೆಗ್ಗುಂಜೆ ಅವರು ಅಧಿಕೃತವಾಗಿ ಸ್ಪರ್ಧಿಸಲು ಅಣಿಯಾಗಿದ್ದಾರೆ. ಸರಳತೆ ಮತ್ತು ಸಜ್ಜನಿಕೆಯ ಸಾಕಾರಮೂರ್ತಿಯಾಗಿ ಗುರುತಿಸಿಕೊಂಡಿರುವ ಇವರಿಗೆ ಬಂಟ ಸಮಾಜದಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಅಮರನಾಥ ಶೆಟ್ಟಿ ಅವರು ಈ ಹಿಂದೆ 2014 ರಿಂದ 2018ರ ಅವಧಿಯಲ್ಲಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಸಮಾಜಸೇವಾ ಸಮಿತಿಯ ಕಾರ್ಯಾಧ್ಯಕ್ಷರಾಗಿ ಹಾಗೂ ವಿದ್ಯಾರ್ಥಿವೇತನ ಸಮಿತಿಯ ಗೌರವ ಸಲಹೆಗಾರರಾಗಿ ಯಶಸ್ವಿ ಸೇವೆ ಸಲ್ಲಿಸಿದ್ದಾರೆ. ಇನ್ನು 2022 ರಿಂದ 2024 ರವರೆಗೆ ಸಂಘದ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದ ಇವರು, ಬಂಟರ ಸಂಘದ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಪೂರ್ಣ ಪಾರದರ್ಶಕತೆಯುಳ್ಳ ‘ಕ್ಯಾಶ್ಲೆಸ್ ವ್ಯವಹಾರ ವ್ಯವಸ್ಥೆ’ಯನ್ನು ಜಾರಿಗೆ ತಂದು ಸಮಾಜದ ಮುಖಂಡರ ಮತ್ತು ಸದಸ್ಯರ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದರು.
ನೇರ ನಡೆ-ನುಡಿ, ಪ್ರಾಮಾಣಿಕತೆ ಹಾಗೂ ನಿಷ್ಪಕ್ಷಪಾತ ಆಡಳಿತಕ್ಕೆ ಹೆಸರಾಗಿರುವ ಅಮರನಾಥ ಶೆಟ್ಟಿ ಹೆಗ್ಗುಂಜೆ ಅವರು ಗೌರವ ಕಾರ್ಯದರ್ಶಿಯಾಗಿ ಆಯ್ಕೆಯಾದರೆ ಸಂಘವು ಮತ್ತಷ್ಟು ಅಭಿವೃದ್ಧಿಯ ಪಥದಲ್ಲಿ ಸಾಗಲಿದೆ ಎಂದು ಸಮಾಜದ ಬಂಧುಗಳು ಆಶಿಸಿದ್ದಾರೆ.


